ನನ್ನ ತಂದೆ ತಾಯಿ ಮದುವೆಯಾಗಿ 55 ವರ್ಷಗಳು ಈಗಾಗಲೇ ಕಳೆದಿತ್ತು. ಒಂದು ದಿನ ಬೆಳಿಗ್ಗೆ, ನನ್ನ ತಾಯಿ ಅಪ್ಪನಿಗೆ ತಿಂಡಿ ಮಾಡಲು ಅಡುಗೆ ಕೋಣೆಗೆ ಹೋದವಳು ದೊಪ್ಪನೆ ಹೃದಯಾಘಾತವಾಗಿ ಬಿದ್ದಳು. ವೆರಾಂಡದಲ್ಲಿ ಕುಳಿತಿದ್ದ ನನ್ನ ತಂದೆ ಓಡಿ ಬಂದು ಅವಳನ್ನುಎತ್ತಿಕೊಂಡು ನಮ್ಮ ಮನೆಯ ಚಿಕ್ಕ ವ್ಯಾನ್ ನ ಒಳಗೆ ಮಲಗಿಸಿ ಆಸ್ಪತ್ರೆಯ ಕಡೆಗೆ ಗಾಡಿ ಓಡಿಸತೊಡಗಿದರು . ರಸ್ತೆಯ ಯಾವ ಟ್ರಾಫಿಕ್ ದೀಪಗಳ ಸಿಗ್ನಲ್ ಗೌರವಿಸದೆ, ನೇರವಾಗಿ ವೇಗವಾಗಿ ವ್ಯಾನ್ ಓಡಿಸಿ ತಾಯಿಯನ್ನು ಆಸ್ಪತ್ರೆಗೆ ಸೇರಿಸಿದರು.
ಆದರೆ ದುರದೃಷ್ಟವಶಾತ್, ನಮ್ಮ ತಾಯಿ ಬದುಕಿ ಬರಲಿಲ್ಲ. ನಾವೆಲ್ಲ ಅಂದು ಅತ್ತು ಅತ್ತು ಬಸವಳಿದಿದ್ದರೂ ನನ್ನ ಅಪ್ಪ ಅಳಲಿಲ್ಲ. ಅಂತ್ಯಕ್ರಿಯೆಯ ಸಮಯದಲ್ಲಿಯೋ , ಸಮಾದಿ ಮಾಡಿ ಬಂದ ಮೇಲೆಯೋ ನನ್ನ ಅಪ್ಪ ಒಂದಕ್ಷರ ಮಾತನಾಡಲಿಲ್ಲ.
ಅವನ ನೋಟದ ಖುಷಿ ಕಳೆದು ಹೋಗಿತ್ತು. ಆದರೂ ಅವನು ಅಷ್ಟೇನೂ ಅಳಲಿಲ್ಲ. ಅದೇ ದಿನ ರಾತ್ರಿ ನಾವು ಮಕ್ಕಳೆಲ್ಲಾ ಸಾವಿನ ನೋವು ಮತ್ತು ತಾಯಿಯನ್ನು ಕಳೆದುಕೊಂಡ ವಿರಹದ ವಾತಾವರಣದಲ್ಲಿ ಇದ್ದೆವು . ದೇವರ ಸ್ತುತಿಗಾನ ಮಾಡಿ ಅಮ್ಮನ ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಿದೆವು. ಆಗ ಅಲ್ಲಿಯೇ ಮನೆಯ ಮೂಲೆಯಲ್ಲಿ ಕುಳಿತಿದ್ದ ಅಪ್ಪ ತಟ್ಟನೆ ಎಚ್ಚರಗೊಂಡವನಂತೆ ಎದ್ದು ನಿಂತು ಕೂಡಲೇ ಧರ್ಮ ಗುರುಗಳನ್ನು ಮನೆಗೆ ಕರೆದುಕೊಂಡು ಬರುವಂತೆ ಅಣ್ಣನಿಗೆ ಹೇಳಿದರು. ನಾವು ಈ ವರೆಗೆ ಕಂಡಂತೆ ತಾಯಿ ಮಹಾ ಧರ್ಮ ಭಕ್ತೆ. ಆದರೆ ನಮ್ಮ ಅಪ್ಪ ಒಮ್ಮೆಯೂ ಚರ್ಚ್ ಗೆ ಹೋದದ್ದು ನಾವು ಕಂಡಿರಲಿಲ್ಲ.
ನನ್ನ ಅಣ್ಣ ಧರ್ಮ ಗುರುಗಳನ್ನು ಕರೆದುಕೊಂಡ ಬಂದಾಗ ಅವರು ಪ್ರಾರ್ಥನೆ ಮಾಡಿ ಆ ಕ್ಷಣದಲ್ಲಿ ನಮ್ಮ ತಾಯಿ ಎಲ್ಲಿರುತ್ತಾರೆ ಎಂದು ಹೇಳುತ್ತಾ ಸಾವಿನ ನಂತರದ ಜೀವನದ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ನನ್ನ ಅಪ್ಪ ಧರ್ಮ ಗುರುಗಳ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸುತ್ತಾರೆ. ಮತ್ತು ಅಮ್ಮ ಈಗ ದೇವಲೋಕದಲ್ಲಿ ಹೇಗೆ ಮತ್ತು ಎಲ್ಲಿದ್ದಾಳೆ ಎಂದು ಧರ್ಮ ಗುರುಗಳ ಮಾತಿನ ಮೂಲಕ ಗ್ರಹಿಸುತ್ತಿದ್ದ ಅಪ್ಪ ಇದ್ದಕ್ಕಿದ್ದಂತೆ ''ನಾವು ಈ ಕೂಡಲೇ ಸ್ಮಶಾನಕ್ಕೆ ಹೋಗೋಣ'' ಎಂದು ಹೇಳಿದರು.
ನನ್ನ ಅಪ್ಪ ಅಲ್ಲಿಯೇ ಬಾಗಿ ಅಮ್ಮನ ಸಮಾದಿಯ ಮೇಲೆ ಮುತ್ತು ಕೊಟ್ಟರು , ನಮಗೆ ತಿಳಿಯದ ಕ್ಷೀಣ ಸ್ವರದಲ್ಲಿ ಗುನುಗುನಿಸುತ್ತಾ ಪ್ರಾರ್ಥಿಸಿದರು.
ಸ್ವಲ್ಪ ನಂತರ ಮುಖ ಒರೆಸಿಕೊಂಡ. "ನಿಮಗೆ ಗೊತ್ತಾ ? ನಿಮ್ಮ ತಾಯಿ ಮತ್ತು ನಾನು, ಎಲ್ಲಾ ಕಾಲದ ಬಿಕ್ಕಟ್ಟಿನಲ್ಲಿಯೂ ಒಟ್ಟಿಗೆ ಇದ್ದೆವು. ನಾನು ಅನೇಕ ಸಲ ಉದ್ಯೋಗವನ್ನು ಬದಲಾಯಿಸಿದೆ ..ಮನೆ ಬದಲಾಯಿಸಿದೆ ..ಜಾಗ ಬದಲಾಯಿಸಿದೆ ." ಅವರು ಮಾತು ಮುಂದುವರಿಸಿದರು.
“ನಾವು ಮನೆ ಮಾರಿ ಊರಾಚೆ ಹೋದಾಗ ನಾವಿಬ್ಬರು ಎಲ್ಲವನ್ನೂ ಪ್ಯಾಕ್ ಮಾಡಿದೆವು, ನಮ್ಮ ಮಕ್ಕಳು ದೊಡ್ಡವರಾಗುವುದನ್ನು ಅವರು ಕಲಿಯುವುದನ್ನು, ನಮ್ಮ ವೃತ್ತಿಜೀವನವನ್ನು ಮುಗಿಸಿದ ಸಂತೋಷವನ್ನು ನಾವು ಜೊತೆಯಾಗಿ ಹಂಚಿಕೊಂಡೆವು. ನಾವು ನಮ್ಮ ಕುಟುಂಬದ ಪ್ರೀತಿಪಾತ್ರರ ನಿರ್ಗಮನವನ್ನು ಅಕ್ಕಪಕ್ಕದಲ್ಲಿದ್ದು ನೋಡಿದ್ದೇವೆ. ನಾವು ಕೆಲವು ಆಸ್ಪತ್ರೆಗಳ ಕಾಯುವ ಕೋಣೆಯಲ್ಲಿಒಟ್ಟಾಗಿ ಕುಳಿತ್ತಿದ್ದೇವೆ. ನಾನು ಮತ್ತು ಅವಳು ನಿಮ್ಮ ಹೆರಿಗೆಗಾಗಿ , ನಿಮ್ಮ ಆರೋಗ್ಯಕ್ಕಾಗಿ ಒಟ್ಟಿಗೆ ಪ್ರಾರ್ಥಿಸಿದ್ದೇವೆ. ನಾವು ನೋವಿನಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸಿದ್ದೇವೆ , ನಾವು ಪ್ರತಿ ಕ್ರಿಸ್ಮಸ್ ನಲ್ಲಿಯೂ ಸಂತೋಷದಿಂದ ತಬ್ಬಿಕೊಳ್ಳುತ್ತಿದ್ದೆವು ಮತ್ತು ನಾವು ನಮ್ಮ ತಪ್ಪುಗಳನ್ನು ಪರಸ್ಪರ ಕ್ಷಮಿಸುತ್ತಿದ್ದೆವು. ಈಗ ಅವಳಿಲ್ಲ . ಅವಳಿಲ್ಲದ ನಾನು ಇರುವುದು ಹೇಗೆ ?"
ಆ ರಾತ್ರಿ ನನಗೆ ನಿಜವಾದ ಪ್ರೀತಿ ಏನೆಂದು ಅರ್ಥವಾಯಿತು. ಈ ಪ್ರೀತಿಯೆಂದರೆ ಬರೀ ಪ್ರಣಯವಲ್ಲ , ಪ್ರೀತಿ ಎಂಬುದು ಕಾಮ ತೃಷೆಯೂ ಅಲ್ಲ ಅಥವಾ ಲೈಂಗಿಕ ಸಂಬಂಧ ವೂ ಅಲ್ಲ. ಬದಲಿಗೆ ಇದು ಪರಸ್ಪರ ನಂಬಿಕೆ , ಕೆಲಸ, ಪೂರಕತೆ, ಕಾಳಜಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನೈಜ ಬದುಕು ಸಾಗಿಸಲು ಬದ್ಧತೆಯುಳ್ಳ ಇಬ್ಬರು ವ್ಯಕ್ತಿಗಳ ನಡುವಿನ ಬಿಡಿಸಲಾಗದ ಅನುಬಂಧ. ನೆಮ್ಮದಿಯ ಸಹಬಾಳ್ವೆಯ ಬದುಕನ್ನು ಪ್ರತಿಪಾದಿಸುವ ಸಿದ್ದಾಂತವೇ ದಾಂಪತ್ಯ ಎಂದು ನಾನು ಅಂದು ಅರಿತುಕೊಂಡೆ. ಹೌದು ಪ್ರೀತಿ ಅನುಭವಿಸಿದವರಿಗೆ ಮಾತ್ರ ಅದರ ನೋವು ನಲಿವು ಅರ್ಥವಾಗಬಲ್ಲದು.
ನಿಮ್ಮ ಹೃದಯದಲ್ಲಿಯೂ ಪ್ರೀತಿಯ ಬೆಳಕು ಮೂಡಲಿ.
ಮೂಲ : ಗೈಆ ಅಥೆನ್ಸ್
ಅನುವಾದ : ಉಫಾಕು
0 ಕಾಮೆಂಟ್ಗಳು